Saturday, December 18, 2010

ಪೆನುಗೊಂಡ ಮತ್ತು ಸುತ್ತ ಮುತ್ತ...


ಡಿಸೆಂಬರ್ ೦೯ ರಿಂದ ೧೧ ರವರೆಗೆ ಹೋಗಿ ಬಂದ ಪ್ರವಾಸ:

ಪೆನುಗೊಂಡ :

 
ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಮೂಲ ಕ್ಷೇತ್ರ.
ಪಶ್ಚಿಮ ಗೋದಾವರಿ ಜಿಲ್ಲೆ.
ಇಲ್ಲಿ ಅಮ್ಮನವರ ಮೂಲ ದೇವಸ್ಥಾನ ಮತ್ತು ವಾಸವಿ ಧಾಮಗಳಿವೆ. ವಾಸವಿ ಧಾಮದಲ್ಲಿ ವಸತಿ ಮತ್ತು ಊಟದ ಸೌಕರ್ಯವಿದೆ. 






ಪೆನುಗೊಂಡ ತಲುಪಲು ಬೆಂಗಳೂರಿನಿಂದ ಶೇಷಾದ್ರಿ ಎಕ್ಸ್ಪ್ರೆಸ್ ಟ್ರೈನಿನಲ್ಲಿ ತಣುಕು ತಲುಪ ಬೇಕು. ತಣುಕು ನಿಲ್ದಾಣದಿಂದ ಪೆನುಗೊಂಡಕ್ಕೆ ೧೨ ಕಿಮಿ. ಆಟೋ ಮತ್ತು ಬಸ್ ಸಿಗುತ್ತವೆ.

ಶೇಷಾದ್ರಿ ಎಕ್ಸ್ಪ್ರೆಸ್ ಟ್ರೈನ್ ಸಂಖ್ಯೆ: ೧೭೨೦೯
ಮತ್ತೆ ಹಿಂದಿರುಗಲು ಟ್ರೈನ್ ಸಂಖ್ಯೆ: ೧೭೨೧೦
ಹೋಗಲು ಒಬ್ಬರಿಗೆ ಟ್ರೈನ್ ಚಾರ್ಜ್ ರೂ. ೩೨೦/- ಆಗಬಹುದು

___________________________________________

ಅನ್ನವರಂ : 

 
ಶ್ರೀ ವೀರ ವೆಂಕಟ ಸತ್ಯನಾರಾಯಣ ಸ್ವಾಮಿ ದೇವಸ್ಥಾನ.

ಪೂರ್ವ ಗೋದಾವರಿ ಜಿಲ್ಲೆ

ಸತ್ಯನಾರಾಯಣ ಸ್ವಾಮಿ, ಅನಂತ ಲಕ್ಷ್ಮಿ ಸತ್ಯವತಿ, ಶಿವ ಗರ್ಭಗುಡಿಯಲ್ಲಿ ನೆಲೆಸಿದ್ದಾರೆ.
ಇದು ಪಂಪಾ ನದಿ ತೀರದ ಪುಟ್ಟ ಬೆಟ್ಟ, ರೈಲ್ವೇ ನಿಲ್ದಾಣದಿಂದ ೩ ಕಿಮಿ. ರಾಷ್ಟ್ರೀಯ ಹೆದ್ದಾರಿ ೫ ರಲ್ಲಿದೆ.



(ಅನ್ನವರಂ = ಕೇಳಿದ ವರ ಕೊಡುವ ದೇವರು)

ರತ್ನಗಿರಿ ರೂಪಾಯ
ರಾಮ ಸತ್ಯದೇವಾಯ |
ಮಹಾಶಕ್ತಿ ಯಂತ್ರಾಯ
ಭಕ್ತ ಕಲ್ಪವೃಕ್ಷಾಯ ||

___________________________________________

ಸಾಮರ್ಲಕೋಟ :


೯೨೨ ನೇ ಶತಮಾನದ ಚೋಲರ ಕಾಲದ ಪುರಾತನ,
ಶ್ರೀ ಚಾಳುಕ್ಯ ಕುಮಾರ ರಾಮ ಭೀಮೇಶ್ವರ ದೇವಸ್ಥಾನ,
ಇದು ೧೨ ಅಡಿ ಎತ್ತರದ ಸುಂದರ ಕಪ್ಪು ಶಿವಲಿಂಗ.

___________________________________________

ದ್ವಾರಪುಡಿ :


ಆಧುನಿಕ ಸುಂದರ ಅಮೃತ ಶಿಲೆಯ,
ಶ್ರೀ ಸೋಮೇಶ್ವರ ದೇವಸ್ಥಾನ.
ಅಯ್ಯಪ್ಪ, ವೆಂಕಟೇಶ್ವರ, ದುರ್ಗ ದೇವಸ್ಥಾನಗಳೂ ಇಲ್ಲಿವೆ.

___________________________________________

ಪಾಲಕೊಲ್ಲು :

 
ಶ್ರೀ ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ.
ಇದು ತುಂಬಾ ದೇವಸ್ಥಾನಗಳಿರುವ ಸಮುಚ್ಛಯ.
ಇನ್ನೊಂದು ವಿಶೇಷವೆಂದರೆ ಇಲ್ಲಿ ಶ್ರೀ ಶನೀಶ್ವರ ಸ್ವಾಮಿಯು ಲಿಂಗಾಕಾರದಲ್ಲಿದ್ದಾರೆ.

ಪಾಲಕೊಲ್ಲುವಿನಲ್ಲಿ ಶ್ರೀ ಕುಬೇರ ದೇವಸ್ಥಾನವೂ ಇದೆ.

(ತೆಲುಗು ಚಿತ್ರನಟ ಚಿರಂಜೀವಿ ಇಲ್ಲಿಂದ ಚುನಾವಣೆಗೆ ಸ್ಪರ್ಧಿಸಿದ್ದರು)

___________________________________________

ಭೀಮವರಂ :

 
ಶ್ರೀ ಉಮಾ ಸೋಮೇಶ್ವರ ದೇವಸ್ಥಾನ.
ಇಲ್ಲಿಯ ಲಿಂಗವು ಹುಣ್ಣಿಮೆಗೆ ಬೆಳ್ಳಗೆ ಮತ್ತು ಅಮಾವಾಸ್ಯೆಗೆ ನಸು ಗಪ್ಪು - ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಮುದ್ದಾದ ಜನಾರ್ಧನ ಸ್ವಾಮಿ, ಶಿರಡಿ ಸಾಯಿ ಬಾಬಾ, ಅನ್ನಪೂರ್ಣೇಶ್ವರಿ, ಸೂರ್ಯ, ಕಾಳ ಭೈರವೇಶ್ವರ  ದೇವಸ್ಥಾನಗಳೂ ಇಲ್ಲಿವೆ.
ಇದು ೩ನೇ ಶತಮಾನದ ದೇವಸ್ಥಾನ, ಈಗ ಪುನರ್ ನಿರ್ಮಾಣವಾಗಿದೆ.



ಭೀಮವರಂನಲ್ಲಿ ಮಾವೂಳಮ್ಮ ದೇವಸ್ಥಾನವೂ ಇದೆ. ಇದು ಸುಂದರ ಅಮೃತ ಶಿಲೆಯ ವಿಗ್ರಹ. ದೇವಿಯ ಕಣ್ಣುಗಳು ಅದ್ಭುತವಾಗಿವೆ.

___________________________________________

ಮಂಗಳಗಿರಿ :


ಮಹಾ ವಿಷ್ಣುವಿನ ೮ ಮಹಾ ಕ್ಷೇತ್ರಗಳಲ್ಲೊಂದು. ಗುಂಟೂರು ಜಿಲ್ಲೆ, ವಿಜಯವಾಡ ಬಸ್ ನಿಲ್ದಾಣದಿಂದ ಕೇವಲ  ೧೩ ಕಿಮಿ ದೂರದಲ್ಲಿದೆ.




ಮಂಗಳಗಿರಿಯಲ್ಲಿ ಸುಂದರವಾದ ಶ್ರಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವಿದೆ.



ಶ್ರಿ ಪಾನಕಾಲ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವು ಬೆಟ್ಟದ ಮೇಲಿದೆ. ಇಲ್ಲಿ ಭಕ್ತರು ಹರೆಸಿಕೊಂಡು ದೇವರಿಗೆ ಬೆಲ್ಲದ ಪಾನಕ ಕುಡಿಸಬಹುದು.

_______________________________________________

ವಿಜಯವಾಡ :

 

ಕೃಷ್ಣ ನದಿ ತೀರದ ಸುಂದರ ನಗರ. ಇಲ್ಲಿಯ ಇಂದ್ರಕೀಲಾದ್ರಿ ಬೆಟ್ಟದಲ್ಲಿ ತಾಯಿ  ಶ್ರೀ. ಕನಕ ದುರ್ಗಮ್ಮ ನೆಲೆಸಿದ್ದಾಳೆ.  ಕೃಷ್ಣ ನದಿ ನೋಡ ಬಹುದು. 



Saturday, November 27, 2010

ಇಂದಿಗಿಂತ ಅಂದೇನೆ ಚಂದವೋ...


ನಾನು ನನ್ನ ಕುಟುಂಬವನ್ನು ಬಿಟ್ಟರೆ ಅತ್ಯಂತ ಪ್ರೀತಿಸುವುದು ನನ್ನ ಬೆಂಗಳೂರನ್ನು. ಒಮ್ಮೆ ಗೆಳತಿಯಂತೆ, ಇನ್ನೊಮ್ಮೆ ಪ್ರೇಯಸಿಯಂತೆ, ಮನಸು ಬಾಡಿದಾಗ ಥೇಟ್ ಹೆತ್ತಮ್ಮನಂತೆ ನನಗೆ ಬೆಂಗಳೂರು, ಆಪ್ತವಾಗುವ ನನ್ನೂರು. ಹುಟ್ಟಿ ಬೆಳೆದದ್ದೆಲ್ಲ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಾದರೂ ಬದುಕು ಕಟ್ಟಿಕೊಂಡದ್ದು ಇಲ್ಲೆ. ಭಗವಂತ ಅವಕಾಶ ಕೊಟ್ಟರೆ ನನ್ನ ಕಡೆ ಯಾತ್ರೆಯೂ ಹರಿಶ್ಚಂದ್ರ ಘಾಟ್ ಕಡೆಗೆ!

ನಾನು ಹತ್ತನೇ ಕ್ಲಾಸ್ ಮುದ್ದೇನಹಳ್ಳಿಯಲ್ಲಿ ಮುಗಿಸಿ, ಪಿ.ಯು.ಸಿ ಓದಲು ಬೆಂಗಳೂರಿಗೆ ಬಂದದ್ದು ೧೯೮೫ರಲ್ಲಿ. ಅದಾಗಲೆ ನನ್ನ ಏಳು ಜನ ಅಣ್ಣಂದಿರಲ್ಲಿ ನಾಲ್ಕು ಜನ ಬೆಂಗಳೂರಿನಲ್ಲೆ ನೆಲಸಿಯಾಗಿತ್ತು. ಮೂರನೇ ಅಣ್ಣ ಡಾ. ಗೋವಿಂದರಜುಲು ಮಕ್ಕಳ ತಙ್ಞರಾಗಿ ತುಬಾ ಹೆಸರು ಮಾಡಿದ್ದರು.
ವಿ.ವಿ. ಪುರಂ, ಪ್ಯಾಲೆಸ್ ಗುಟ್ಟಹಳ್ಳಿ, ಚಾಮಾರಾಜ ಪೇಟೆ, ಮಲ್ಲೇಶ್ವರಂ, ಗಂಗೇನಹಳ್ಳಿ ಹೀಗೆ ನನ್ನ ವಿಳಾಸ ಬದಲಾದಂತೆಲ್ಲ ಬೆಂಗಳೂರೂ ಸಾಕಷ್ಟು ಬದಲಾಗುತ್ತ ಹೋಯಿತು.

ನನಗೇ ನೆನಪಿದ್ದಂತೆ ಹೆಬ್ಬಾಳ ವೆಟರ್ನರಿ ಕಾಲೇಜು ದಾಟಿದರೆ ಸರಹದ್ದೆ ಮುಗಿದೇ ಹೊಗುತಿತ್ತು. ನಗರ ಸಾರಿಗೆ ಬಸ್ಸುಗಳಲ್ಲಿ ೩೦, ೪೦, ೫೦ ಪೈಸೆ ಟಿಕೆಟ್ ಇರುತ್ತಿತ್ತು. ಚಾಮರಾಜ ಪೇಟೆಯ ೪ನೇ ಮುಖ್ಯ ರಸ್ತೆಯ ಪುರಾತನ ಗಜಾನನ ಹೋಟೆಲಿನಲ್ಲಿ ೭೦ ಪೈಸೆಗೆ ಊರಗಲ ಮಸಾಲೆ ದೋಸೆ, ಕೇಳಿದವರಿಗೆ ಕೇಳಿದಷ್ಟು ಚಟ್ನಿ ಸಾಂಬರು, ೩೦ ಪೈಸೆಗೆ ಚಂಬು ಲೆಕ್ಕದಲ್ಲಿ ಕಾಫಿ! ಎರಡೂವರೆ ರೂಪಾಯಿಗೆಲ್ಲ ಥೀಯಟರುಗಳಲ್ಲಿ ಕನ್ನಡ ಸಿನಿಮಾಗಳೂ, ೧೦೦೦ಕ್ಕೆ ಬಾಡಿಗೆಗೆ ಎರಡು ರೂಮಿನ ಮನೆ, ೨೦೦ ರೂಪಾಯಿಗೆಲ್ಲ ಮೂಲೆ ಶೆಟ್ಟರ ಅಂಗಡಿಯಲ್ಲಿ ತಿಂಗಳ ರೆಷನ್ನೂ. ಸಂಪೇ ಬೇಕಿರದೆ ದಿನ ಪೂರ ಸುರಿದು ಹೋಗುತ್ತಿದ್ದ ಕಾರ್ಪೊರೇಷನ್ ನೀರು.

ಹೀಗೆ ಪಟ್ಟಿ ಬೆಳೆಯುತ್ತದೆ. ನನಗೆ ಫ್ರೀ ಹಾಸ್ಟೆಲ್ನಲ್ಲಿ ವಾಸ್ತವ್ಯ, ತಿಂಡಿ ಊಟ ಅಲ್ಲೇ ಮುಗಿಯುತಿತ್ತು. ನನಗೆ ಅಣ್ಣಂದಿರು ಕೊಡುತ್ತಿದ್ದದ್ದೇ ೫೦ ರೂಪಾಯಿ ಪಾಕೆಟ್ ಮನಿ ಅದರಲ್ಲೆ ವಾರ ಪೂರ ಊರೆಲ್ಲ ಅಲೆದಾಡಿ, ಪ್ಯಾಕು ಗಟ್ಟಲೆ ಸಿಗರೇಟು ಸುಟ್ಟು, ಸಂಜೆಗೆ ಸಜ್ಜನ್ ರಾವ್ ಸರ್ಕಲ್ಲಿನ ಅಸಂಖ್ಯಾತ ಗಾಡಿಗಳಲ್ಲಿ ಪಾನಿ ಪುರಿಯೋ ಬಾತ್ ಮಸಾಲೆಯೋ ತಿಂದು, ಸ್ನೇಹಿತರಿಗೆ ಬಾದಾಮಿ ಹಾಲು ಕುಡಿಸಿಯೂ ವಾರದ ಕೊನೆಗೆ ರಾಜಣ್ಣಾ, ವಿಷ್ಣು, ಶಿವಣ್ಣ, ಅಂಬಿ ಸಿನಿಮಾಗಳಿಗೆ ಬಾಲ್ಕಾನಿ ಟಿಕೇಟಿಗೆ ಕಾಸು ಮಿಕ್ಕಿರುತಿತ್ತು.
ಆಗೆಲ್ಲ ನನ್ನೂರು ಇಷ್ಟು ತುಟ್ಟಿಯಾಗಿರಲಿಲ್ಲ. ತೀರಾ ಭಾನುವಾರ ೧೦೦೦ದ ನೋಟು ಜೇಬಲ್ಲಿ ಮಡಗಿಕೊಂಡು, ಹೆಂಡತಿ ಕರೆದುಕೊಂಡು ಸಿನಿಮಾಗೆ ಅಂತ ಹೋದರೂ... ಕಡೆಗೆ ಪಾರ್ಕಿಂಗ್ ದುಡ್ಡೂ ಅವಳೇ ಸಾಲ ಕೊಡುವಂತ ಕಾಲ ಆವಾಗಿರಲಿಲ್ಲ!

ಕಾಲ ಕೆಟ್ಟೋಯ್ತು ಬಿಡ್ರಿ...